ಕಳಭ್ರರು

 ದಕ್ಷಿಣ ಭಾರತದ ಖ್ಯಾತ ಮನೆತನಗಳಾದ ಚೋಳ, ಚೇರ, ಪಾಂಡ್ಯ ಮತ್ತು ಪಲ್ಲವರನ್ನು ಬದಿಗೊತ್ತಿ 5-6ನೆಯ ಶತಮಾನಗಳಲ್ಲಿ ರಾಜ್ಯವಾಳಿದ ದೊರೆಗಳು, ಇವರ ಉಲ್ಲೇಖ ಇಲ್ಲಿನ ಶಾಸನಗಳಲ್ಲಿ ಮತ್ತು ಸಾಹಿತ್ಯಗ್ರಂಥಗಳಲ್ಲಿ ಕಾಣಬರುತ್ತದೆ. ಆದರೆ ಈ ಮಾಹಿತಿಗಳು ಇವರ ವಿಚಾರದಲ್ಲಿ ವಿಶೇಷವಾಗಿ ಏನನ್ನೂ ತಿಳಿಸುವುದಿಲ್ಲ. ಕಳಭ್ರರು ಯಾರು ಎಂಬ ವಿಷಯದಲ್ಲಿ ಚರಿತ್ರಕಾರರಲ್ಲಿ ಒಮ್ಮತವಿಲ್ಲ. ಅವರು ಕೊಡಂಬಾಳೂರಿನ ಮುತ್ತರೈಯರ್ ವಂಶಜರೆಂದು ಕೆಲವರ ಮತ. ತೊಂಡೈಮಂಡಲದ ಉತ್ತರಭಾಗಗಳಲ್ಲಿ ಆಳುತ್ತಿದ್ದ ಕಳವರ್ ಎಂಬ ಈ ಗುಡ್ಡನಾಡಿನ ಜನ ಈಗಿನ ತಿರುಪತಿಯ ಸಮೀಪದಲ್ಲಿ ವಾಸವಾಗಿದ್ದು ಕಳ್ಳತನ ದರೋಡೆಗಳನ್ನು ಮಾಡುತ್ತಿದ್ದರೆಂದೂ ಸು. 4ನೆಯ ಶತಮಾನದ ಹೊತ್ತಿಗೆ ಸಾತವಾಹನರ ಪ್ರಾಬಲ್ಯ ಕುಂಠಿತವಾಗಿ ಪಲ್ಲವರು ಪ್ರಬಲವಾದುದರಿಂದ ಮತ್ತು ಸಮುದ್ರಗುಪ್ತ ದಕ್ಷಿಣಾಪಥದ ಮೇಲೆ ದಂಡೆತ್ತಿ ಹೋಗಿ ವಿಜಯವನ್ನು ಸಂಪಾದಿಸಿದುದರಿಂದ ಉಂಟಾದ ರಾಜಕೀಯ ಕ್ಷೋಭೆಯ ಸಮಯದಲ್ಲಿ ಇವರು ತಿರುಪತಿಯಿಂದ ಹೊರಟು ತೊಂಡೈಮಂಡಲದಲ್ಲಿ ನೆಲೆಸಿದರೆಂದೂ ಅವರ ತರ್ಕ. ತಮಿಳು ಶಾಸನಗಳಲ್ಲಿ ಮತ್ತು ಸಾಹಿತ್ಯದಲ್ಲಿ ವೆಲ್ಲಾಳ ಕುಲಕ್ಕೆ ಸೇರಿದ ಕಳಪ್ಪಾಳರ್ ಎಂಬ ಜನಗಳ ಉಲ್ಲೇಖ ಕಾಣಬರುತ್ತದೆ. ಈ ಕಳಪ್ಪಾಳರೇ ಕಳಭ್ರರೆಂದೂ ಆದ್ದರಿಂದ ಇವರು ವೆಲ್ಲಾಳಗುಲದವರೆಂದೂ ಮತ್ತೆ ಕೆಲವು ಇತಿಹಾಸಕಾರರು ವಾದಿಸಿದ್ದಾರೆ. ಕಳಭ್ರರು ಕರ್ಣಾಟಕದವರೆಂದೂ ಇನ್ನು ಕೆಲವು ಇತಿಹಾಸಕಾರರು ತರ್ಕಿಸಿದ್ದಾರೆ. ಶ್ರವಣಬೆಳಗೊಳದ ಚಿಕ್ಕಬೆಟ್ಟವನ್ನು ಪ್ರಾಚೀನ ಶಾಸನಗಳಲ್ಲಿ ಕಳಬಪ್ಪು ಎಂದು ಕರೆದಿರುವುದು ಗಮನಾರ್ಹ. ಈ ಪ್ರದೇಶಕ್ಕೆ ಕಳಬಪ್ಪುನಾಡು ಎನ್ನುವ ಹೆಸರೂ ಇತ್ತು. ಅದೇ ರೀತಿ ಕಳವರನಾಡು ಎಂಬುದು ಪ್ರಾಚೀನ ಕರ್ಣಾಟಕದಲ್ಲಿ ಬೆಂಗಳೂರು-ಕೋಲಾರ ಪ್ರಾಂತ್ಯದ ಹೆಸರಾಗಿದ್ದಿತು. ಹಲ್ಮಿಡಿ ಶಾಸನದಲ್ಲಿ ಕಾಕುತ್ಸ್ಥವರ್ಮನಿಗೆ ಕಳಭೋರ ಎಂಬ ಶತ್ರುಗಳು ಇದ್ದರೆಂದು ಹೇಳಿದೆ. ಇವರು ಕಳಭ್ರರೇ ಇರಬೇಕೆಂದು ಊಹಿಸಲಾಗಿದೆ. ಅಂದರೆ ಶ್ರವಣಬೆಳಗೊಳದ ಪ್ರದೇಶದಲ್ಲಿ ಮೊದಲಿಗೆ ನೆಲೆಸಿದ್ದ ಇವರು ಕದಂಬ ಮತ್ತು ಗಂಗ ದೊರೆಗಳ ಪ್ರಾಬಲ್ಯದಿಂದ ಪೂರ್ವಕ್ಕೆ ಹೋಗಿ ಕೋಲಾರ ಜಿಲ್ಲೆಯ ನಂದಿಯಲ್ಲಿ ನೆಲೆಸಿದರೆಂದೂ ಸು. 5ನೆಯ ಶತಮಾನದ ಪ್ರಾರಂಭದಲ್ಲಿ ತಮಿಳುನಾಡಿನ ಕಡೆಗೆ ಹೋದರೆಂದೂ ಹೇಳಬಹುದು.

 ಕಳಭ್ರರ ಉಗಮದ ಬಗೆಗೆ ಇರುವ ಅಸ್ಪಷ್ಟತೆಯೇ ಅವರ ಇತಿಹಾಸದ ವಿಷಯದಲ್ಲೂ ಕಾಣಬರುತ್ತದೆ. ಪ್ರಸಿದ್ಧವಾದ ವೆಳ್ವಿಕ್ಕುಡಿ ಶಾಸನದಲ್ಲಿ ಕಳಭ್ರವಂಶದ ರಾಜನೊಬ್ಬ (ಕಲಿಯರಸನ್) ಅನೇಕಾನೇಕ ಅಧಿರಾಜರನ್ನು ಸೋಲಿಸಿ ಭೂಮಿಯನ್ನು ತನ್ನ ವಶಮಾಡಿಕೊಂಡು ಬ್ರಹ್ಮದೇಯ ಭೂಮಿಗಳನ್ನು ಕಿತ್ತುಕೊಂಡನೆಂದೂ ಅನಂತರ ಪಾಂಡ್ಯರಾಜ ಕಡುಂಗೋನ್ ಕಳಭ್ರರನ್ನು ಸೋಲಿಸಿ ರಾಜ್ಯವನ್ನು ತನ್ನ ವಶ ಮಾಡಿಕೊಂಡನೆಂದೂ ಹೇಳಿದೆ. ಈ ಕಳಭ್ರರಾಜ ಯಾರು ಎಂಬುದಾಗಿ ಮಾತ್ರ ಇಲ್ಲಿ ಹೇಳಿಲ್ಲ. ಆದರೆ ಪ್ರಸಿದ್ಧ ಬೌದ್ಧ ಲೇಖಕ ಬುದ್ಧದತ್ತನ ಬರೆವಣಿಗೆಯಿಂದ ಅಚ್ಚುತವಿಕ್ರಾಂತ ಎಂಬ ಕಳಭ್ರರಾಜ ಚೋಳರಾಜ್ಯದಲ್ಲಿ ಆಳುತ್ತಿದ್ದನೆಂದು ತಿಳಿದುಬರುತ್ತದೆ. ಈ ಅಚ್ಚುತವಿಕ್ರಾಂತನೇ ಪಾಂಡ್ಯ, ಚೇರ, ಚೋಳ ಮತ್ತು ಪಲ್ಲವ ರಾಜರುಗಳನ್ನು ಸೋಲಿಸಿ ತಮಿಳುನಾಡನ್ನು ಕಳಭ್ರರ ವಶಕ್ಕೆ ಸೇರಿಸಲು ಕಾರಣನಾದವನೆಂದು ಊಹಿಸಬಹುದು. ಅಚ್ಚುತವಿಕ್ರಾಂತ ಕಳಭ್ರರಾಜರಲ್ಲಿ ಶಕ್ತನೆಂದು ಹೇಳಲು ಅನೇಕ ಸಾಹಿತ್ಯ ಗ್ರಂಥಗಳಲ್ಲಿ ಕಾಣಬರುವ ಉಲ್ಲೇಖವೇ ಸಾಕ್ಷಿ. ಅಚ್ಚುತ ವಿಕ್ರಾಂತ ಬೌದ್ಧಧರ್ಮಕ್ಕೆ ವಿಶೇಷ ಪ್ರೋತ್ಸಾಹವನ್ನು ಕೊಟ್ಟನೆಂದೂ ಅವನ ಕಾಲದಲ್ಲಿ ಅನೇಕ ಬೌದ್ಧವಿಹಾರಗಳು ಚೋಳ ರಾಜ್ಯದಲ್ಲಿದ್ದುವೆಂದೂ ಬುದ್ಧದತ್ತನ ಬರೆವಣೆಗೆಯಿಂದ ತಿಳಿಯುತ್ತದೆ. ತಮಿಳು ವ್ಯಾಕರಣ ಗ್ರಂಥಕರ್ತೃ ಅಮಿತಸಾಗರ (10ನೆಯ ಶತಮಾನ) ಅಚ್ಚುತ ವಿಕ್ರಾಂತನ ವಿಷಯದಲ್ಲಿ ಕೆಲವು ಪದ್ಯಗಳನ್ನು ಉದಾಹರಿಸುತ್ತಾನೆ. ಬಹುಶಃ ಕಳಭ್ರರು ಬೌದ್ಧರೆಂದೂ ತಮಿಳುನಾಡಿನಲ್ಲಿ ಅವರು ನಡೆಸಿದ ಕ್ರಾಂತಿಗೆ ಮತೀಯ ಕಾರಣಗಳೇ ಪ್ರಧಾನವಾದವೆಂದೂ ನೀಲಕಂಠಶಾಸ್ತ್ರಿಯವರು ಊಹಿಸುತ್ತಾರೆ. ವೆಳ್ವಿಕ್ಕುಡಿ ಶಾಸನವನ್ನೇ ಪ್ರಧಾನವಾಗಿಟ್ಟುಕೊಂಡು ಎಲ್ಲ ವಿದ್ವಾಂಸರೂ ಕಳಭ್ರರು ದುಷ್ಟ ದೊರೆಗಳು (ಕಲಿಯರಸನ್), ಸಂಸ್ಕøತಿ ನಾಶಕರು ಎಂದು ಹೇಳಿದ್ದಾರೆ. ಕಳಭ್ರರ ಪ್ರಾಬಲ್ಯವನ್ನು ಮುರಿದು ಅವರ ನಾಶಕ್ಕೆ ಕಾರಣರಾದವರು ಪಾಂಡ್ಯರಾಜ ಕಡುಂಗೋನ್ ಮತ್ತು ಪಲ್ಲವ ಸಿಂಹವಿಷ್ಣು. ಪಲ್ಲವ 1ನೆಯ ನರಸಿಂಹವರ್ಮ, ಚಾಳುಕ್ಯ 1ನೆಯ ಮತ್ತು 2ನೆಯ ವಿಕ್ರಮಾಧಿತ್ಯ - ಇವರೂ ಕಳಭ್ರರನ್ನು ಸೋಲಿಸಿದರೆಂದು ಅವರ ಶಾಸನಗಳಲ್ಲಿ ಹೇಳಿದೆ. ದಕ್ಷಿಣಭಾರತದಲ್ಲಿ ಸು. ಎರಡು ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದ ಕಳಭ್ರರ ಚರಿತ್ರೆ ಹೆಚ್ಚಿನ ಸಂಶೋಧನೆಗಳು ನಡೆಯುವವರೆಗೂ ಸಮಸ್ಯೆಯಾಗಿಯೇ ಉಳಿಯುತ್ತದೆ.          

 (ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ